ಶ್ರೀ ಶಿವಕುಮಾರ ಸ್ವಾಮೀಜಿ

ನಡೆದಾಡುವ ದೇವರು ಎಂದು ಇಡೀ ಕರ್ನಾಟಕದಲ್ಲಿ ಖ್ಯಾತನಾಮರಾದ, ಸಿದ್ಧಗಂಗಾ ಮಠದ ಪೂರ್ವ ಗುರುಗಳು, ಲಿಂಗೈಕ್ಯ ಪೂಜ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರು ೧೧೨ ವರ್ಷಗಳ (ಜನನ- ಶಿವಣ್ಣ, ೧ ಏಪ್ರಿಲ್ ೧೯೦೭ - ೨೧ ಜನವರಿ ೨೦೧೯) ಸಾರ್ಥಕ ಜೀವನ ನಡಿಸಿ ಕೋಟ್ಯಾಂತರ ಭಕ್ತರ ಜೀವನಕ್ಕೆ ಮಾರ್ಗದರ್ಶಕರಾಗಿದ್ದರು. ಅವರ ಕೆಲವು ನುಡಿಮುತ್ತುಗಳು ಇಲ್ಲಿವೆ

ಶ್ರೀ ಶಿವಕುಮಾರ ಸ್ವಾಮೀಜಿ
ಶ್ರೀ ಶಿವಕುಮಾರ ಸ್ವಾಮೀಜಿ


  • ನೀವು ಸೇವಿಸುವ ಅನ್ನ, ಬೇಯಿಸುವ ನೀರು, ನಿಮ್ಮ ದುಡಿಮೆಯಅ ಬೆವರಾಗಿರಬೇಕೇ ಹೊರತು, ಬೇರೆಯವರ ಕಣ್ಣೀರಾಗಿರಬಾರದು.
  • ಧರ್ಮ ಅಧರ್ಮಗಳಿಗಿಂತ ಅವರವರ ಭಕುತಿಗೆ ಅವರವರ ಭಾವಕ್ಕೆ ತಕ್ಕಂತೆ ನಡೆದುಕೊಳ್ಳುವುದೇ ಧರ್ಮ.
  • ಸಾಧಕನೊಬ್ಬನಿಗೆ ಸನ್ಮಾನವೆಂದರೆ ಅವನನ್ನು ಸಭೆಗೆ ಕರೆದು ಶಾಲು, ಪೇಟ ತೊಡಿಸಿ, ಫಲಪುಷ್ಪಗಳನಿತ್ತರೆ ಅದು ಸನ್ಮಾನವಲ್ಲ. ಬದಲಾಗಿ ಆ ವ್ಯಕ್ತಿಯಲ್ಲಿರಬಹುದಾದ ಒಳ್ಳೆಯ ಗುಣವೊಂದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಾವು ಆ ವ್ಯಕ್ತಿಗೆ ಮಾಡಬಹುದಾದ ನಿಜವಾದ ಸನ್ಮಾನ.
  • ವ್ಯವಸಾಯ ಎಂಬುದು ಪವಿತ್ರ ವೃತ್ತಿ. ಅನ್ನಬ್ರಹ್ಮನ ಸೃಷ್ಠಿ ಮಾಡುವ ಅನುಪಮ ಉದ್ಯೋಗ.
  • ದುಡಿಮೆ ಸತ್ಯಶುದ್ಧವಾಗಿರಬೇಕು, ಪರಹಿತ ಮುಖಿಯಾಗಿರಬೇಕು.
  • ನಮ್ಮ ಪೂರ್ವಿಕರು ನಮಗಾಗಿ ದುಡಿದ ಎತ್ತು, ಹೋರಿ, ಹಸುಗಳು ಸತ್ತಾಗ ಸಮಾಧಿ ಮಾಡುತ್ತಿದ್ದರೇ ಹೊರತು ಅವುಗಳನ್ನು ಕಟುಕರಿಗೆ ಮಾರುತ್ತಿರಲಿಲ್ಲ. ಮಾನವೀಯತೆ ಅವರ ಜೀವ ಗುಣವಾಗಿತ್ತು.
  • ಸೇವೆ ಎಂಬುದು ಪ್ರಚಾರದ ಸರಕಲ್ಲ, ಅದು ಗುಪ್ತ ಶಕ್ತಿ. ವ್ಯಕ್ತಿಯನ್ನು ಆರೋಗ್ಯವಂತನನ್ನಾಗಿಡುವ ಸಂಜೀವಿನಿ.
  • ಮಾನವ ಪ್ರಜ್ಞೆ ಜಾಗೃತವಾಗದ ಹೊರತು ಇಂದಿನ ಸಮಸ್ಯೆಗಳಿಗೆ ಪರಿಹಾರ ಕಾಣದು.
  • ಸಹಜ ಪ್ರೀತಿ ಕಲ್ಲನ್ನೂ ಕರಗಿಸುತ್ತದೆ. ಕಟುಕನನ್ನು ಕರುಣಾಮಯನನ್ನಾಗಿಸುತ್ತದೆ.
  • ಜಗತ್ತು ವೇಗವಾಗಿ ಮುಂದುವರೆದಿದೆ. ಆದರೆ ಆ ವೇಗದಲ್ಲಿ ವಿನಯವಿಲ್ಲ, ವಿಚಾರವಿಲ್ಲ, ಮೌಲ್ಯಗಳಿಲ್ಲ.
  • ಬಯಸಿದ್ದೆಲ್ಲಾ ಸಿಗುವಂತಿದ್ದರೆ, ಬಯಕೆಗೆ ಬೆಲೆ ಇರುತ್ತಿರಲಿಲ್ಲ. ಅನಿಸಿದ್ದೆಲ್ಲಾ ಹೇಳುವಂತಿದ್ದರೆ ಮೌನಕ್ಕೆ ಅರ್ಥವಿರುತ್ತಿರಲಿಲ್ಲ.
  • ಯೋಗ್ಯ ಮಕ್ಕಳಿಗೆ ಆಸ್ತಿ ಮಾಡುವ ಅಧಿಕಾರವಿಲ್ಲ. ಯೋಗ್ಯವಲ್ಲದ ಮಕ್ಕಳಿಗೆ ಎಶ್ಟೇ ಆಸ್ತಿ ಮಾಡಿದರೂ ಪ್ರಯೋಜನವಿಲ್ಲ.